2. ಆರೋನನೊಡನೆಯೂ ಅವನ ಪುತ್ರರೊಡನೆಯೂ ಇಸ್ರೇಲರೆಲ್ಲರೊಡನೆಯೂ ಮಾತಾಡು. ಯೆಹೋವನು ಹೀಗೆ ಆಜ್ಞಾಪಿಸಿದ್ದಾನೆಂದು ಹೇಳು. ಅದೇನೆಂದರೆ,
|
3. ಇಸ್ರೇಲರಲ್ಲಿ ಯಾವನಾದರೂ ಹೋರಿಯನ್ನಾಗಲಿ ಕುರಿಮರಿಯನ್ನಾಗಲಿ ಹೋತವನ್ನಾಗಲಿ ಪಾಳೆಯದೊಳಗೆ ಅಥವಾ ಪಾಳೆಯದ ಹೊರಗೆ ವಧಿಸಬಹುದು.
|
4. ಅವನು ಆ ಪ್ರಾಣಿಯನ್ನು ದೇವದರ್ಶನಗುಡಾರದ ಬಾಗಿಲಿಗೆ ತರಬೇಕು. ಅವನು ಆ ಪಶುವಿನ ಒಂದು ಭಾಗವನ್ನು ಯೆಹೋವನಿಗೆ ಕಾಣಿಕೆಯಾಗಿ ಕೊಡಬೇಕು. ಅವನು ರಕ್ತವನ್ನು ಸುರಿಸಿದ್ದರಿಂದ ತನ್ನ ಕಾಣಿಕೆಯನ್ನು ಯೆಹೋವನ ಪವಿತ್ರ ಗುಡಾರದೊಳಗೆ ತೆಗೆದುಕೊಂಡು ಹೋಗಬೇಕು. ಅವನು ಪ್ರಾಣಿಯ ಒಂದು ಭಾಗವನ್ನು ಯೆಹೋವನಿಗೆ ಉಡುಗೊರೆಯಾಗಿ ತೆಗೆದುಕೊಂಡು ಹೋಗದಿದ್ದರೆ, ಅವನನ್ನು ಅವನ ಜನರಿಂದ ಬಹಿಷ್ಕರಿಸಬೇಕು.
|
5. ಸಮಾಧಾನಯಜ್ಞರೂಪವಾಗಿ ಇದನ್ನು ಯೆಹೋವನಿಗೆ ಅರ್ಪಿಸುವ ಯಜ್ಞಕ್ಕೆ ಇದೇ ನಿಯಮ. ಇಸ್ರೇಲರು ಹೊಲಗಳಲ್ಲಿ ಕೊಲ್ಲುವ ತಮ್ಮ ಪ್ರಾಣಿಗಳನ್ನು ದೇವದರ್ಶನಗುಡಾರದ ಬಾಗಿಲಿಗೆ ಅಂದರೆ ಯೆಹೋವನ ಸನ್ನಿಧಿಯಲ್ಲಿರುವ ಯಾಜಕರ ಬಳಿಗೆ ತರಬೇಕು.
|
6. ಬಳಿಕ ಯಾಜಕನು ಆ ಪಶುಗಳ ರಕ್ತವನ್ನು ದೇವದರ್ಶನಗುಡಾರದ ಬಾಗಿಲಿನ ಹತ್ತಿರವಿರುವ ಯೆಹೋವನ ಯಜ್ಞವೇದಿಕೆಗೆ ಚೆಲ್ಲುವನು ಮತ್ತು ಅವುಗಳ ಕೊಬ್ಬನ್ನು ಯಜ್ಞವೇದಿಕೆಯ ಮೇಲೆ ಹೋಮಮಾಡುವನು. ಅದರ ಸುವಾಸನೆಯು ಯೆಹೋವನಿಗೆ ಪ್ರಿಯವಾಗಿದೆ.
|
7. ಅವರು ‘ಅಜದೇವತೆಗಳಿಗೆ’ ಇನ್ನು ಮುಂದೆ ಬಲಿಕೊಡಬಾರದು. ಅವರು ಅನ್ಯದೇವತೆಗಳ ಹಿಂದೆ ಹೋಗಿದ್ದಾರೆ. ಆ ರೀತಿಯಲ್ಲಿ ಅವರು ಸೂಳೆಯರ ಹಾಗೆ ವರ್ತಿಸಿದ್ದಾರೆ. ಈ ನಿಯಮಗಳು ಶಾಶ್ವತವಾಗಿವೆ.
|
8. “ಜನರಿಗೆ ಹೇಳಬೇಕಾದದ್ದೇನೆಂದರೆ: ನಿಮ್ಮ ಮಧ್ಯದಲ್ಲಿ ವಾಸಿಸುತ್ತಿರುವ ಯಾವ ಇಸ್ರೇಲನಾಗಲಿ ಅನ್ಯನಾಗಲಿ ಸರ್ವಾಂಗಹೋಮವನ್ನಾಗಲಿ ಯಜ್ಞವನ್ನಾಗಲಿ ಅರ್ಪಿಸಬಹುದು.
|
9. ಅವನು ತನ್ನ ಬಲಿಯನ್ನು ದೇವದರ್ಶನಗುಡಾರದ ಬಾಗಿಲಿಗೆ ತೆಗೆದುಕೊಂಡು ಬಂದು ಯೆಹೋವನಿಗೆ ಅರ್ಪಿಸಬೇಕು. ಇಲ್ಲವಾದರೆ ಅವನನ್ನು ಅವನ ಕುಲದಿಂದ ತೆಗೆದುಹಾಕಬೇಕು.
|
10. “ರಕ್ತವನ್ನು ತಿನ್ನುವ ಪ್ರತಿಯೊಬ್ಬನಿಗೂ ನಾನು ವಿರುದ್ಧವಾಗಿರುವೆನು. ಅವನು ನಿಮ್ಮ ಮಧ್ಯದಲ್ಲಿ ವಾಸವಾಗಿರುವ ಇಸ್ರೇಲನಾಗಲಿ ಪರದೇಶಸ್ಥನಾಗಲಿ ಆಗಿರಬಹುದು. ನಾನು ಆ ವ್ಯಕ್ತಿಯನ್ನು ಅವನ ಜನರಿಂದ ತೆಗೆದುಹಾಕುವೆನು.
|
11. ಯಾಕೆಂದರೆ ದೇಹದ ಜೀವ ರಕ್ತದಲ್ಲಿದೆ. ನೀವು ನಿಮಗೋಸ್ಕರವಾಗಿ ಯಜ್ಞವೇದಿಕೆಯ ಮೇಲೆ ಪ್ರಾಯಶ್ಚಿತ್ತ ಮಾಡಲಿ ಎಂದು ನಾನು ಅದನ್ನು ನಿಮಗೆ ಕೊಟ್ಟಿದ್ದೇನೆ. ನೀವು ನಿಮಗೋಸ್ಕರವಾಗಿ ಪ್ರಾಯಶ್ಚಿತ್ತ ಮಾಡಲು ಈ ನಿಯಮಗಳನ್ನು ಉಪಯೋಗಿಸಬೇಕು. ಒಬ್ಬನ ಜೀವಕ್ಕೆ ರಕ್ತವೇ ಪ್ರಾಯಶ್ಚಿತ್ತವಾಗಿದೆ. ಜೀವಿಯೊಂದನ್ನು ಕೊಂದಿದ್ದರ ಬೆಲೆಯಾಗಿ ನೀವು ನನಗೆ ಆ ರಕ್ತವನ್ನು ಕೊಡಬೇಕು.
|
12. ಆದ್ದರಿಂದ ನಾನು ಇಸ್ರೇಲರಿಗೆ ಹೇಳುವುದೇನೆಂದರೆ: ನಿಮ್ಮಲ್ಲಿ ಯಾವನೂ ರಕ್ತಭೋಜನ ಮಾಡಬಾರದು ಮತ್ತು ನಿಮ್ಮ ಮಧ್ಯದಲ್ಲಿ ವಾಸಿಸುವ ಯಾವ ಪರದೇಶಸ್ಥನೂ ರಕ್ತಭೋಜನ ಮಾಡಬಾರದು.
|
13. “ಯಾವನಾದರೂ ಒಂದು ಪ್ರಾಣಿಯನ್ನು ಬೇಟೆಯಾಡಿದರೆ ಅಥವಾ ಪಕ್ಷಿಯನ್ನು ಹಿಡಿದರೆ, ಅವನು ಅದರ ರಕ್ತವನ್ನು ನೆಲದ ಮೇಲೆ ಸುರಿದು ಅದನ್ನು ಮಣ್ಣಿನಿಂದ ಮುಚ್ಚಿಬಿಡಬೇಕು. ಅವನು ಇಸ್ರೇಲನಾದರೂ ನಿಮ್ಮ ಮಧ್ಯದಲ್ಲಿ ವಾಸಿಸುವ ಪರದೇಶಸ್ಥನಾದರೂ ಹಾಗೆಯೇ ಮಾಡಬೇಕು.
|
14. ನೀವು ಇದನ್ನು ಯಾಕೆ ಮಾಡಬೇಕೆಂದರೆ, ಮಾಂಸದಲ್ಲಿ ರಕ್ತವು ಇನ್ನೂ ಇದ್ದರೆ, ಅದರ ಪ್ರಾಣವು ಇನ್ನೂ ಮಾಂಸದಲ್ಲಿ ಇದೆ. ಆದ್ದರಿಂದ ನಾನು ಇಸ್ರೇಲರಿಗೆ ಈ ಅಪ್ಪಣೆಯನ್ನು ಕೊಡುತ್ತೇನೆ. ರಕ್ತದಿಂದ ಕೂಡಿರುವ ಮಾಂಸವನ್ನು ತಿನ್ನಬಾರದು. ಯಾವನಾದರೂ ರಕ್ತ ಭೋಜನ ಮಾಡಿದರೆ, ಅವನು ತನ್ನ ಜನರಿಂದ ತೆಗೆದುಹಾಕಲ್ಪಡಬೇಕು.
|
15. ಅಲ್ಲದೆ ಯಾವನಾದರೂ ತನ್ನಷ್ಟಕ್ಕೆ ಸತ್ತ ಪ್ರಾಣಿಯನ್ನು ತಿಂದರೆ ಅಥವಾ ಬೇರೆ ಪ್ರಾಣಿಯಿಂದ ಕೊಲ್ಲಲ್ಪಟ್ಟ ಪ್ರಾಣಿಯನ್ನು ತಿಂದರೆ, ಅವನು ಸಾಯಂಕಾಲದವರೆಗೆ ಅಶುದ್ಧನಾಗಿರುವನು. ಅವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ನೀರಿನಲ್ಲಿ ಸ್ನಾನಮಾಡಿಕೊಳ್ಳಬೇಕು. ಅವನು ಇಸ್ರೇಲನಾಗಿದ್ದರೂ ನಿಮ್ಮ ಮಧ್ಯದಲ್ಲಿ ವಾಸಿಸುವ ಪರದೇಶಸ್ಥನಾಗಿದ್ದರೂ ಹಾಗೆಯೇ ಮಾಡಬೇಕು.
|
16. ಅವನು ತನ್ನ ಬಟ್ಟೆಗಳನ್ನು ತೊಳೆದುಕೊಳ್ಳದೆಯೂ ಸ್ನಾನ ಮಾಡಿಕೊಳ್ಳದೆಯೂ ಹೋದರೆ ಆಗ ಅವನು ಪಾಪಮಾಡಿದ ದೋಷಿಯಾಗಿರುವನು.”
|