2. ನನ್ನ ಮನಸ್ಸು ದೇವರಿಗಾಗಿ, ಚೈತನ್ಯಸ್ವರೂಪನಾದ ದೇವರಿಗಾಗಿ ಹಾರೈಸುತ್ತದೆ;
ನಾನು ಯಾವಾಗ ಹೋಗಿ ದೇವರ ಸನ್ನಿಧಿಯಲ್ಲಿ ಸೇರುವೆನೋ? |
3. “ನಿನ್ನ ದೇವರು ಎಲ್ಲಿ?” ಎಂದು ಜನರು
ಯಾವಾಗಲೂ ನನ್ನನ್ನು ಪರಿಹಾಸ್ಯ ಮಾಡುವುದರಿಂದ, ಹಗಲಿರುಳು ನನಗೆ ಕಣ್ಣೀರೇ ಆಹಾರವಾಯಿತು. |
4. ನಾನು ಭಜನೋತ್ಸವದಲ್ಲಿ ಸೇರಿ,
ಜನಸಮೂಹದೊಡನೆ ಹರ್ಷಧ್ವನಿಮಾಡುತ್ತಾ, ಸ್ತೋತ್ರಪದಗಳನ್ನು ಹಾಡುತ್ತಾ, ದೇವಾಲಯಕ್ಕೆ ಹೋಗುತ್ತಿದ್ದದ್ದನ್ನೇ ನೆನಪಿಗೆ ತಂದುಕೊಂಡು, ನನ್ನೊಳಗೆ ನಾನೇ ಹಂಬಲಿಸುತ್ತಿರುವೆನು. |
5. ನನ್ನ ಮನವೇ, ನೀನು ಕುಗ್ಗಿ ಹೋಗಿರುವುದೇನು?
ಹೀಗೆ ವ್ಯಥೆಪಡುವುದೇಕೆ? ದೇವರನ್ನು ನಿರೀಕ್ಷಿಸು; ಆತನೇ ನನಗೆ ರಕ್ಷಕನೂ ದೇವರೂ ಆಗಿದ್ದಾನೆ. ನಾನು ಇನ್ನೂ ಆತನನ್ನು ಸ್ತುತಿಸುತ್ತಿರುವೆನು. |
6. ನನ್ನ ದೇವರೇ, ನನ್ನ ಪ್ರಾಣವು ಕುಗ್ಗಿಹೋಗಿದೆ;
ಆದುದರಿಂದ ಯೊರ್ದನ್ ಹೊಳೆಯ ದೇಶ, ಹೆರ್ಮೋನ್ ಪರ್ವತ, ಮಿಸಾರ್ ಬೆಟ್ಟ ಇವುಗಳಲ್ಲಿರುವವನಾಗಿ ನಿನ್ನನ್ನು ಸ್ಮರಿಸುತ್ತೇನೆ. |
7. ನಿನ್ನ ಜಲಪಾತಗಳಿಂದ ಉಂಟಾಗುವ ಮಹಾಘೋಷವು
ಒಂದು ಪ್ರವಾಹವು ಮತ್ತೊಂದು ಪ್ರವಾಹವನ್ನು ಕರೆಯುತ್ತದೋ ಎಂಬಂತಿರುವುದು. ಹಾಗೆಯೇ ನೀನು ಅಲ್ಲಕಲ್ಲೋಲವಾದ ದುಃಖ ಪ್ರವಾಹದ ತೆರೆಗಳನ್ನು ನನ್ನ ತಲೆಯ ಮೇಲಿಂದ ದಾಟಿಸಿದಿಯಲ್ಲಾ. |
8. ಯೆಹೋವನು ಹಗಲಿನಲ್ಲಿ ತನ್ನ ಪ್ರೀತಿಯನ್ನು ನನಗೆ ಅನುಗ್ರಹಿಸುವನು;
ರಾತ್ರಿ ವೇಳೆಯಲ್ಲಿಯೂ ಆತನ ಕೀರ್ತನೆ ನನ್ನಲ್ಲಿರುವುದು. ನನ್ನ ಜೀವಾಧಾರಕನಾದ ದೇವರನ್ನು ಪ್ರಾರ್ಥಿಸುವೆನು. |
9. ನಾನು ನನ್ನ ಶರಣನಿಗೆ, “ದೇವರೇ, ಏಕೆ ನನ್ನನ್ನು ಮರೆತುಬಿಟ್ಟಿದ್ದಿ?
ನಾನು ಏಕೆ ಶತ್ರುಬಾಧೆಯಿಂದ ದುಃಖಿಸುತ್ತಾ ವಿಕಾರಿಯಾಗಿ ಅಲೆಯಬೇಕು?” ಎಂದು ಮೊರೆಯಿಡುವೆನು. |
10. ನನ್ನ ವಿರೋಧಿಗಳು, “ನಿನ್ನ ದೇವರು ಎಲ್ಲಿ?” ಎಂದು ಯಾವಾಗಲೂ ನನ್ನನ್ನು ಪರಿಹಾಸ್ಯ ಮಾಡುವುದರಿಂದ
ನನ್ನ ಎಲುಬುಗಳೆಲ್ಲಾ ಮುರಿದ ಹಾಗಿವೆ. |
11. ನನ್ನ ಮನವೇ, ನೀನು ಕುಗ್ಗಿ ಹೋಗಿರುವುದೇನು?
ಹೀಗೆ ವ್ಯಥೆಪಡುವುದೇಕೆ? ದೇವರನ್ನು ನಿರೀಕ್ಷಿಸು; ಆತನೇ ನನಗೆ ರಕ್ಷಕನೂ, ದೇವರೂ ಆಗಿದ್ದಾನೆ; ನಾನು ಇನ್ನೂ ಆತನನ್ನು ಸ್ತುತಿಸುತ್ತಿರುವೆನು. PE |