Kannada ಬೈಬಲ್
ಪ್ರಸಂಗಿ ಒಟ್ಟು 12 ಅಧ್ಯಾಯಗಳು
ಪ್ರಸಂಗಿ ಅಧ್ಯಾಯ 6
1 ಸೂರ್ಯನ ಕೆಳಗೆ ಇರುವ ಇನ್ನೊಂದು ಕೇಡನ್ನು ಕಂಡೆನು, ಅದು ಮನುಷ್ಯರ ಮೇಲೆ ಬಹು ಭಾರವಾಗಿದೆ.
2 ಅದೇನೆಂದರೆ, ಮನುಷ್ಯನು ಹೃದಯದಲ್ಲಿ ಬಯಸಿದ್ದನ್ನು ಕೊರತೆಯಾಗದಂತೆ ದೇವರು ಅವನಿಗೆ ಧನ, ಐಶ್ವರ್ಯ, ಸನ್ಮಾನವನ್ನು ಕೊಡುತ್ತಾರೆ. ಆದರೆ ಅದನ್ನು ಅನುಭವಿಸುವಂತೆ ದೇವರು ಸಾಮರ್ಥ್ಯವನ್ನು ಕೊಡುವುದಿಲ್ಲ. ಆದುದರಿಂದ ಪರರು ಅದನ್ನು ಅನುಭವಿಸುತ್ತಾರೆ. ಇದು ವ್ಯರ್ಥವೂ ವ್ಯಸನಕರವಾದ ಕೇಡು.
3 ಒಬ್ಬ ಮನುಷ್ಯನಿಗೆ ನೂರು ಮಕ್ಕಳಿರಬಹುದು ಮತ್ತು ಅವನು ಬಹಳ ವರ್ಷ ಬದುಕಿರಬಹುದು. ಅವನು ತನ್ನ ಐಶ್ವರ್ಯವನ್ನು ಅನುಭವಿಸದೆ, ಸರಿಯಾದ ಶವಸಂಸ್ಕಾರ ಇಲ್ಲದೆ ಹೋದರೆ ಅವನಿಗಿಂತಲೂ ಮೃತ ಸ್ಧಿತಿಯಲ್ಲಿ ಹುಟ್ಟಿರುವ ಕೂಸೇ ಮೇಲು ಎಂದುಕೊಂಡೆ.
ಪ್ರಸಂಗಿ ಅಧ್ಯಾಯ 6
4 ಆ ಕೂಸು ವ್ಯರ್ಥವಾಗಿ ಬಂದು ಕತ್ತಲೆಯಲ್ಲಿ ಹೊರಟು ಹೋಗುತ್ತದೆ. ಅದರ ಹೆಸರು ಅಂಧಕಾರದಿಂದ ಕವಿದಿರುವುದು.
5 ಇದಲ್ಲದೆ ಅದು ಸೂರ್ಯನನ್ನು ನೋಡಲಿಲ್ಲ, ಯಾವುದನ್ನು ಅರಿತಿರಲಿಲ್ಲ. ಆದರೂ ಅದು ಆ ಮನುಷ್ಯನಿಗಿಂತ ಹೆಚ್ಚು ವಿಶ್ರಾಂತಿ ಹೊಂದಿದೆ.
6 ಒಂದು ವೇಳೆ ಎರಡು ಸಾವಿರ ವರ್ಷಗಳು ಆ ಮನುಷ್ಯನು ಬದುಕಿದರೂ ಅವನು ತನ್ನ ಐಶ್ವರ್ಯವನ್ನು ಅನುಭವಿಸದಿದ್ದರೆ ಏನು ಪ್ರಯೋಜನ? ಎಲ್ಲರೂ ಒಂದೇ ಸ್ಥಳಕ್ಕೆ ಹೋಗುತ್ತಾರಲ್ಲವೇ?
ಪ್ರಸಂಗಿ ಅಧ್ಯಾಯ 6
7 ಪ್ರತಿಯೊಬ್ಬನ ಪ್ರಯಾಸ ಅವನ ಹೊಟ್ಟೆಗಾಗಿಯೇ, ಆದರೆ ಅವನ ಹಸಿವು ತೃಪ್ತಿಹೊಂದುವುದಿಲ್ಲ.
8 ಬುದ್ಧಿಹೀನನಿಗಿಂತ ಜ್ಞಾನಿಗೆ ಹೆಚ್ಚು ಲಾಭ ಏನಿದೆ? ಇತರರ ಮುಂದೆ ಹೇಗೆ ವರ್ತಿಸಬೇಕು ಎಂದು ತಿಳಿದುಕೊಳ್ಳುವುದರಿಂದ ಬಡವರಿಗೇನು ಲಾಭ?
9 ಹೆಚ್ಚು ಅಪೇಕ್ಷಿಸಿ ಅಲೆದಾಡುವುದಕ್ಕಿಂತ ಕಣ್ಣೆದುರಿಗೆ ಇರುವುದನ್ನು ಅನುಭವಿಸುವುದು ಉತ್ತಮ. ಗಾಳಿಯನ್ನು ಬೆನ್ನಟ್ಟಿದಂತೆ ಇದೂ ಕೂಡ ವ್ಯರ್ಥವೇ.
ಪ್ರಸಂಗಿ ಅಧ್ಯಾಯ 6
10 ಜಗತ್ತಿನಲ್ಲಿ ಇರುವ ಎಲ್ಲದಕ್ಕೂ ಈಗಾಗಲೇ ಹೆಸರನ್ನು ಇಡಲಾಗಿದೆ. ಮನುಷ್ಯನು ಯಾರು ಎಂದೂ ಗೊತ್ತಾಗಿದೆ. ತನಗಿಂತ ಬಲಿಷ್ಟನೊಂದಿಗೆ ಯಾರೂ ಹೋರಾಡುವುದಿಲ್ಲ.
11 ಮಾತು ಹೆಚ್ಚಿದಷ್ಟೂ, ಕಡಿಮೆ ಅರ್ಥೈಸುತ್ತವೆ, ಅದರಿಂದ ಯಾರಿಗೆ ಏನು ಲಾಭ?
ಪ್ರಸಂಗಿ ಅಧ್ಯಾಯ 6
12 ನೆರಳಿನಂತೆ ವ್ಯರ್ಥವಾಗಿ ಕಳೆದುಹೋಗುವ ಮನುಷ್ಯನ ಜೀವಮಾನದ ಎಲ್ಲಾ ದಿವಸಗಳಲ್ಲಿ ಅವನಿಗೆ ಯಾವುದು ಒಳ್ಳೆಯದೆಂದು ಯಾರಿಗೆ ಗೊತ್ತು? ಅವನು ಹೊರಟುಹೋದ ಮೇಲೆ ಸೂರ್ಯನ ಕೆಳಗೆ ಏನಾಗುತ್ತದೆಂದು ಅವನಿಗೆ ಯಾರು ಹೇಳಬಲ್ಲರು?