Kannada ಬೈಬಲ್
ಅರಣ್ಯಕಾಂಡ ಒಟ್ಟು 36 ಅಧ್ಯಾಯಗಳು
ಅರಣ್ಯಕಾಂಡ
ಅರಣ್ಯಕಾಂಡ ಅಧ್ಯಾಯ 21
ಅರಣ್ಯಕಾಂಡ ಅಧ್ಯಾಯ 21
ಕಾನಾನ್ಯರೊಡನೆ ಯುದ್ಧ 1 ಕಾನಾನ್ಯನಾಗಿದ್ದ ಅರಾದಿನ ರಾಜನು ನೆಗೆವ್ನಲ್ಲಿದ್ದುಕೊಂಡು ರಾಜ್ಯಭಾರ ಮಾಡುತ್ತಿದ್ದನು. ಇಸ್ರೇಲರು ಅತಾರೀಮಿನ ಮಾರ್ಗವಾಗಿ ಬರುತ್ತಾರೆಂಬ ಸುದ್ದಿಯು ಅವನಿಗೆ ಮುಟ್ಟಿತು. ಆದ್ದರಿಂದ ಅವನು ಹೋಗಿ ಇಸ್ರೇಲರೊಡನೆ ಯುದ್ಧಮಾಡಿ ಅವರಲ್ಲಿ ಕೆಲವರನ್ನು ಸೆರೆಹಿಡಿದನು.
2 ಇಸ್ರೇಲರು ಯೆಹೋವನಿಗೆ ಹರಕೆಯನ್ನು ಮಾಡಿಕೊಂಡು, “ನಾವು ಈ ಜನರನ್ನು ಜಯಿಸುವಂತೆ ನೀನು ಅನುಗ್ರಹಿಸಿದರೆ ನಾವು ಅವರ ಗ್ರಾಮಗಳನ್ನು ಪೂರ್ಣವಾಗಿ ಹಾಳುಮಾಡಿ ಯೆಹೋವನಿಗಾಗಿಯೇ ಬಿಟ್ಟುಬಿಡುತ್ತೇವೆ” ಅಂದರು.
ಅರಣ್ಯಕಾಂಡ ಅಧ್ಯಾಯ 21
3 ಯೆಹೋವನು ಅವರ ಪ್ರಾರ್ಥನೆಯನ್ನು ಕೇಳಿ ಕಾನಾನ್ಯರನ್ನು ಜಯಿಸಲು ಸಹಾಯಮಾಡಿದ್ದರಿಂದ ಅವರು ಕಾನಾನ್ಯರನ್ನೂ ಅವರ ಗ್ರಾಮಗಳನ್ನೂ ಸಂಪೂರ್ಣವಾಗಿ ನಾಶಮಾಡಿಬಿಟ್ಟರು. ಆದ್ದರಿಂದ ಆ ಪ್ರದೇಶಕ್ಕೆ ಹೊರ್ಮಾ ಎಂದು ಹೆಸರಾಯಿತು.
ತಾಮ್ರದ ಸರ್ಪ 4 ಇಸ್ರೇಲರು ಹೋರ್ ಬೆಟ್ಟದಿಂದ ಹೊರಟು ಕೆಂಪು ಸಮುದ್ರದ ಮಾರ್ಗವಾಗಿ ಪ್ರಯಾಣಮಾಡಿದರು. ಅವರು ಎದೋಮ್ ದೇಶವನ್ನು ಸುತ್ತಿಕೊಂಡು ಹೋಗುವುದಕ್ಕೆ ಹೀಗೆ ಮಾಡಿದರು. ಜನರು ಮಾರ್ಗದಲ್ಲಿ ತಾಳ್ಮೆ ತಪ್ಪಿದರು.
ಅರಣ್ಯಕಾಂಡ ಅಧ್ಯಾಯ 21
5 ಆಗ ಅವರು ದೇವರಿಗೂ ಮೋಶೆಗೂ ವಿರೋಧವಾಗಿ ಮಾತಾಡುತ್ತಾ “ಈ ಮರುಭೂಮಿಯಲ್ಲಿ ಸಾಯಲೆಂದು ನಮ್ಮನ್ನು ಈಜಿಪ್ಟಿನಿಂದ ಯಾಕೆ ಬರಮಾಡಿದೆ? ಇಲ್ಲಿ ಆಹಾರವೂ ಇಲ್ಲ, ನೀರೂ ಇಲ್ಲ. ಈ ನಿಸ್ಸಾರವಾದ ಆಹಾರವನ್ನು ತಿಂದು ನಮಗೆ ಬೇಸರವಾಯಿತು” ಎಂದು ಹೇಳಿದರು.
6 ಆದ್ದರಿಂದ ಯೆಹೋವನು ಅವರ ಮಧ್ಯದಲ್ಲಿ ವಿಷಕರವಾದ ಹಾವುಗಳನ್ನು ಕಳುಹಿಸಿದನು. ಅವುಗಳು ಅವರನ್ನು ಕಚ್ಚಿದ್ದರಿಂದ ಅನೇಕ ಇಸ್ರೇಲರು ಸತ್ತರು.
7 ಆಗ ಜನರು ಮೋಶೆಯ ಬಳಿಗೆ ಬಂದು, “ನಾವು ನಿನಗೂ ಯೆಹೋವನಿಗೂ ವಿರೋಧವಾಗಿ ಮಾತಾಡಿ ಪಾಪ ಮಾಡಿದ್ದೇವೆ. ಈ ಸರ್ಪಗಳನ್ನು ನಮ್ಮಿಂದ ತೊಲಗಿ ಹೋಗುವಂತೆ ಪ್ರಾರ್ಥನೆ ಮಾಡು” ಎಂದು ಬೇಡಿಕೊಂಡರು. ಮೋಶೆ ಜನರಿಗೋಸ್ಕರ ಪ್ರಾರ್ಥಿಸಿದನು.
ಅರಣ್ಯಕಾಂಡ ಅಧ್ಯಾಯ 21
8 ಯೆಹೋವನು ಮೋಶೆಗೆ, “ನೀನು ತಾಮ್ರದಿಂದ ವಿಷಸರ್ಪದ ಆಕಾರವನ್ನು ಮಾಡಿಸಿ ಧ್ವಜಸ್ತಂಭದ ಮೇಲೆ ಎತ್ತಿ ನಿಲ್ಲಿಸಬೇಕು, ಸರ್ಪಗಳಿಂದ ಕಚ್ಚಿಸಿಕೊಂಡವನು ಅದನ್ನು ನೋಡಿದರೆ ಬದುಕಿಕೊಳ್ಳುವನು” ಎಂದು ಆಜ್ಞಾಪಿಸಿದನು.
9 ಆದ್ದರಿಂದ ಮೋಶೆ ತಾಮ್ರದಿಂದ ಸರ್ಪದ ಆಕಾರವನ್ನು ಮಾಡಿಸಿ ಧ್ವಜಸ್ತಂಭದ ಮೇಲೆ ಇಡಿಸಿದನು. ಸರ್ಪಗಳಿಂದ ಕಚ್ಚಿಸಿಕೊಂಡಿದ್ದವನು ಆ ತಾಮ್ರದ ಸರ್ಪವನ್ನು ನೋಡಿ ಬದುಕಿಕೊಂಡನು.
ಹೋರ್ ಬೆಟ್ಟದಿಂದ ಮೋವಾಬಿಗೆ 10 ಇಸ್ರೇಲರು ಪ್ರಯಾಣವನ್ನು ಮುಂದುವರಿಸಿ ಓಬೋತ್ ಎಂಬ ಸ್ಥಳದಲ್ಲಿ ಇಳಿದುಕೊಂಡರು.
ಅರಣ್ಯಕಾಂಡ ಅಧ್ಯಾಯ 21
11 ಬಳಿಕ ಅವರು ಓಬೋತಿನಿಂದ ಇಯ್ಯೇ ಅಬಾರೀಮಿಗೆ ಹೋದರು. ಇದು ಮೋವಾಬಿನ ಪೂರ್ವದಲ್ಲಿರುವ ಮರುಭೂಮಿಯ ಪ್ರದೇಶದಲ್ಲಿತ್ತು.
12 ಬಳಿಕ ಜನರು ಅಲ್ಲಿಂದ ಹೊರಟು ಜೆರೆದ್ ಕಣಿವೆಗೆ ಪ್ರಯಾಣ ಮಾಡಿ ಅಲ್ಲಿ ಇಳಿದುಕೊಂಡರು.
13 ಅವರು ಅಲ್ಲಿಂದ ಹೊರಟು ಅರ್ನೋನ್ ಹೊಳೆಯ ಆಚೆ ಕಡೆಯಲ್ಲಿ ಅಂದರೆ ಅಮೋರಿಯರ ಪ್ರದೇಶದೊಳಗೆ ವಿಸ್ತರಿಸಿರುವ ಮರುಭೂಮಿಯಲ್ಲಿ ಪಾಳೆಯ ಮಾಡಿಕೊಂಡರು. ಅರ್ನೋನ್ ನದಿಯು ಮೋವಾಬ್ಯರಿಗೂ ಅಮೋರಿಯರಿಗೂ ಗಡಿಯಾಗಿದೆ.
ಅರಣ್ಯಕಾಂಡ ಅಧ್ಯಾಯ 21
14 ಅದಕ್ಕನುಸಾರವಾಗಿ [BKS]“ಯೆಹೋವನ ಯುದ್ಧಗಳು”[BKE] ಎಂಬ ಗ್ರಂಥದಲ್ಲಿ, “ಸೂಫದಲ್ಲಿರುವ ವಾಹೇಬನ್ನು, ಅರ್ನೋನ್ ಹೊಳೆಗೆ ಕೂಡುವ ಕಣಿವೆಗಳನ್ನು ಮತ್ತು
15 ಆರ್ ವಸತಿ ಪ್ರದೇಶಕ್ಕೆ ನಡೆಸುವ ಮೋವಾಬಿನ ಗಡಿಯ ಉದ್ದಕ್ಕೂ ಇರುವ ಕಣಿವೆಗಳನ್ನು ದಾಟಿದ್ದಾಯಿತು” ಎಂದು ಬರೆದಿದೆ.
16 ಅಲ್ಲಿಂದ ಅವರು ಬೇರ್ ಎಂಬ ಸ್ಥಳಕ್ಕೆ ಬಂದರು. “ಜನರನ್ನು ಕೂಡಿಸಿಕೊ, ನಾನು ಅವರಿಗೆ ನೀರನ್ನು ಕೊಡುವೆನು” ಎಂದು ಯೆಹೋವನು ಮೋಶೆಗೆ ಹೇಳಿದ್ದು ಈ ಬಾವಿಯ ಸ್ಥಳದಲ್ಲೇ.
ಅರಣ್ಯಕಾಂಡ ಅಧ್ಯಾಯ 21
17 ಆಗ ಇಸ್ರೇಲರು ಈ ಹಾಡನ್ನು ಹಾಡಿದರು: “ಬಾವಿಯೇ, ಉಕ್ಕುತ್ತಾ ಬಾ! ಜನರೇ, ಅದರ ಕುರಿತು ಹಾಡಿ!
18 ಪ್ರಧಾನರು ಈ ಬಾವಿಯನ್ನು ತೋಡಿದರು. ಪ್ರಮುಖ ನಾಯಕರು ಈ ಬಾವಿಯನ್ನು ತೋಡಿದರು. ಅವರು ತಮ್ಮ ದೊಣ್ಣೆಗಳಿಂದ ಮತ್ತು ಕೋಲುಗಳಿಂದ ಈ ಬಾವಿಯನ್ನು ಅಗೆದರು.” ಆಮೇಲೆ ಜನರು “ಮತ್ತಾನ” ಎಂಬ ಮರುಭೂಮಿಯಿಂದ ಹೊರಟರು.
ಅರಣ್ಯಕಾಂಡ ಅಧ್ಯಾಯ 21
19 ಬಳಿಕ ಅವರು ಮತ್ತಾನದಿಂದ ನಹಲೀಯೇಲಿಗೆ ಪ್ರಯಾಣ ಮಾಡಿದರು. ಬಳಿಕ ಅವರು ನಹಲೀಯೇಲಿನಿಂದ ಬಾಮೋತಿಗೆ ಪ್ರಯಾಣ ಮಾಡಿದರು.
20 ಜನರು ಬಾಮೋತಿನಿಂದ ಮೋವಾಬ್ಯರ ಪ್ರದೇಶದ ಕಣಿವೆಗೆ ಪ್ರಯಾಣ ಮಾಡಿದರು. ಪಿಸ್ಗಾ ಬೆಟ್ಟದ ತುದಿಯ ಸಮೀಪದಲ್ಲಿ ನಿಂತುಕೊಂಡರೆ ಮರುಭೂಮಿಯು ಕಾಣುವುದು.
ಸೀಹೋನ್ ಮತ್ತು ಓಗ್ 21 ಇಸ್ರೇಲರು ಸಂದೇಶಕರನ್ನು ಅಮೋರಿಯರ ಅರಸನಾದ ಸೀಹೋನನ ಬಳಿಗೆ ಕಳುಹಿಸಿದರು. ಅವರು ಅರಸನಿಗೆ,
ಅರಣ್ಯಕಾಂಡ ಅಧ್ಯಾಯ 21
22 “ನಿಮ್ಮ ದೇಶವನ್ನು ಹಾದುಹೋಗುವುದಕ್ಕೆ ನಮಗೆ ಅಪ್ಪಣೆಕೊಡು. ನಿಮ್ಮ ಹೊಲಗಳಿಗಾಗಲಿ ದ್ರಾಕ್ಷಿತೋಟಗಳಿಗಾಗಲಿ ನಾವು ತಿರುಗಿಕೊಳ್ಳುವುದಿಲ್ಲ. ನಿನ್ನ ಯಾವ ಬಾವಿಗಳಿಂದಲೂ ನಾವು ನೀರು ಕುಡಿಯುವುದಿಲ್ಲ. ನಾವು ನಿಮ್ಮ ದೇಶವನ್ನು ದಾಟಿಹೋಗುವ ತನಕ ರಾಜ ಮಾರ್ಗದಲ್ಲಿಯೇ ಪ್ರಯಾಣ ಮಾಡುತ್ತೇವೆ” ಎಂದು ಹೇಳಿದರು.
23 ಆದರೆ ಅರಸನಾದ ಸೀಹೋನನು ಇಸ್ರೇಲರಿಗೆ ತನ್ನ ದೇಶದ ಮೂಲಕ ಹಾದುಹೋಗಲು ಬಿಡಲಿಲ್ಲ. ಅರಸನು ತನ್ನ ಇಡೀ ಸೈನ್ಯವನ್ನು ಕೂಡಿಸಿಕೊಂಡು ಇಸ್ರೇಲರ ವಿರುದ್ಧ ಯುದ್ಧಮಾಡಲು ಮರುಭೂಮಿಯ ಕಡೆಗೆ ಹೊರಟನು. ಅವನು ಯಹಜ್ ಎಂಬಲ್ಲಿಗೆ ಬಂದನು; ಅಲ್ಲಿ ರಾಜನ ಸೈನ್ಯವು ಇಸ್ರೇಲರಿಗೆ ವಿರೋಧವಾಗಿ ಯುದ್ಧಮಾಡಿತು.
ಅರಣ್ಯಕಾಂಡ ಅಧ್ಯಾಯ 21
24 ಆದರೆ ಇಸ್ರೇಲರು ಅರಸನನ್ನು ಕೊಂದುಹಾಕಿದರು. ಬಳಿಕ ಅವರು ಅರ್ನೋನ್ ನದಿಯಿಂದ ಹಿಡಿದು ಯಬ್ಬೋಕ್ ನದಿಯವರೆಗಿರುವ ಅವನ ಭೂಮಿಯನ್ನು ವಶಪಡಿಸಿಕೊಂಡರು. ಅವರು ಅಮ್ಮೋನಿಯರ ಮೇರೆಯವರೆಗಿರುವ ಪ್ರದೇಶವನ್ನೆಲ್ಲಾ ವಶಪಡಿಸಿಕೊಂಡರು. ಅಮ್ಮೋನಿಯರು ತಮ್ಮ ಗಡಿಯನ್ನು ಭದ್ರವಾಗಿ ರಕ್ಷಿಸಿಕೊಂಡದ್ದರಿಂದ ಇಸ್ರೇಲರು ಮುಂದಕ್ಕೆ ಹೋಗಲಿಲ್ಲ.
25 ಇಸ್ರೇಲರು ಅಮೋರಿಯರ ಪಟ್ಟಣಗಳನ್ನೆಲ್ಲಾ ವಶಪಡಿಸಿಕೊಂಡು ಅವುಗಳಲ್ಲಿ ವಾಸಿಸಿದರು. ಅವರು ಹೆಷ್ಬೋನನ್ನು ಮತ್ತು ಅದರ ಸುತ್ತಲಿರುವ ಎಲ್ಲಾ ಚಿಕ್ಕ ಪಟ್ಟಣಗಳನ್ನು ಸಹ ವಶಪಡಿಸಿಕೊಂಡರು.
ಅರಣ್ಯಕಾಂಡ ಅಧ್ಯಾಯ 21
26 ಹೆಷ್ಬೋನಿನಲ್ಲಿ ಅಮೋರಿಯರ ಅರಸನಾದ ಸೀಹೋನನು ವಾಸಿಸುತ್ತಿದ್ದನು. ಸೀಹೋನನು ಮೊದಲಿನ ಮೋವಾಬ್ಯರ ಅರಸನೊಡನೆ ಯುದ್ಧ ಮಾಡಿದ್ದನು. ಸೀಹೋನನು ಅರ್ನೋನ್ ನದಿಯವರೆಗಿರುವ ಆ ರಾಜನ ಪ್ರದೇಶವನ್ನೆಲ್ಲ ವಶಪಡಿಸಿಕೊಂಡಿದ್ದನು.
27 ಆದಕಾರಣ ಹಾಡುವವರು ಈ ಗೀತೆಯನ್ನು ಹಾಡುತ್ತಾರೆ: “ಹೆಷ್ಬೋನಿಗೆ, ಬಾ! ಮತ್ತೆ ಅದನ್ನು ನಿರ್ಮಿಸು! ಸೀಹೋನನ ಪಟ್ಟಣವನ್ನು ಮತ್ತೆ ಸ್ಥಾಪಿಸಿರಿ.
ಅರಣ್ಯಕಾಂಡ ಅಧ್ಯಾಯ 21
28 ಹೆಷ್ಬೋನಿನಲ್ಲಿ ಬೆಂಕಿಯುಂಟಾಯಿತು. ಆ ಬೆಂಕಿ ಸೀಹೋನನ ಪಟ್ಟಣದಲ್ಲಿ ಉಂಟಾಯಿತು. ಆ ಬೆಂಕಿಯು ಮೋವಾಬಿನಲ್ಲಿರುವ ‘ಆರ್’ ಪಟ್ಟಣವನ್ನು ನಾಶಮಾಡಿತು. ಅದು ಅರ್ನೋನ್ ನದಿಯ ಬಳಿಯಲ್ಲಿರುವ ಬೆಟ್ಟಗಳನ್ನು ಸುಟ್ಟುಹಾಕಿತು.
29 ಮೋವಾಬೇ, ಇದು ನಿನಗೆ ಕೆಟ್ಟದ್ದಾಗಿದೆ. ಕೆಮೋಷಿನ ಜನರೇ, ನೀವು ನಾಶವಾದಿರಿ. ಅವನ ಪುತ್ರರು ಓಡಿಹೋದರು. ಅಮೋರಿಯ ರಾಜನಾದ ಸೀಹೋನನು ಅವನ ಪುತ್ರಿಯರನ್ನು ಸೆರೆ ಒಯ್ದನು.
ಅರಣ್ಯಕಾಂಡ ಅಧ್ಯಾಯ 21
30 ಆದರೆ ನಾವು ಆ ಅಮೋರಿಯರನ್ನು ಸೋಲಿಸಿದೆವು. ಹೆಷ್ಬೋನಿನಿಂದ ದೀಬೋನಿನವರೆಗಿರುವ ಅವರ ಪಟ್ಟಣಗಳನ್ನೂ ನಾಶೀಮಿನಿಂದ ನೋಫಹದ (ಮೇದೆಬಾದ ಹತ್ತಿರ) ವರೆಗಿರುವ ಪಟ್ಟಣಗಳನ್ನೂ ನಾವು ನಾಶಮಾಡಿದೆವು.”
31 ಹೀಗೆ ಇಸ್ರೇಲರು ಅಮೋರಿಯರ ದೇಶದಲ್ಲಿ ತಮ್ಮ ಪಾಳೆಯ ಹಾಕಿದರು.
32 ಮೋಶೆಯು ಯಗ್ಜೇರ್ ಪಟ್ಟಣದ ಗುಟ್ಟನ್ನು ತಿಳಿದುಕೊಂಡು ಬರುವುದಕ್ಕೆ ಕೆಲವು ಜನರನ್ನು ಕಳುಹಿಸಿದ ನಂತರ, ಇಸ್ರೇಲರು ಆ ಪಟ್ಟಣವನ್ನು ವಶಪಡಿಸಿಕೊಂಡರು. ಅದರ ಸುತ್ತಲಿರುವ ಚಿಕ್ಕ ಪಟ್ಟಣಗಳನ್ನು ಅವರು ವಶಪಡಿಸಿಕೊಂಡರು. ಇಸ್ರೇಲರು ಅಲ್ಲಿದ್ದ ಅಮೋರಿಯರನ್ನು ಓಡಿಸಿದರು.
ಅರಣ್ಯಕಾಂಡ ಅಧ್ಯಾಯ 21
33 ಬಳಿಕ ಇಸ್ರೇಲರು ಬೇರೆ ದಿಕ್ಕಿಗೆ ತಿರುಗಿ ಬಾಷಾನಿನ ಮಾರ್ಗವಾಗಿ ಪ್ರಯಾಣಮಾಡಿದರು. ಆಗ ಬಾಷಾನಿನ ಅರಸನಾದ ಓಗನು ಎದ್ರೈ ಎಂಬಲ್ಲಿ ಇಸ್ರೇಲರೊಂದಿಗೆ ಯುದ್ಧಮಾಡಲು ತನ್ನ ಸೈನ್ಯ ಸಮೇತವಾಗಿ ಬಂದನು.
34 ಆದರೆ ಯೆಹೋವನು ಮೋಶೆಗೆ, “ಆ ಅರಸನಿಗೆ ಹೆದರಬೇಡ. ನೀನು ಅವನನ್ನು ಸೋಲಿಸುವಂತೆ ಮಾಡುವೆನು. ನೀನು ಅವನ ಸೈನ್ಯವನ್ನು ಮತ್ತು ಅವನ ದೇಶವನ್ನು ಪೂರ್ಣವಾಗಿ ವಶಪಡಿಸಿಕೊಳ್ಳುವೆ. ಹೆಷ್ಬೋನಿನಲ್ಲಿ ವಾಸಿಸಿದ್ದ ಅಮೋರಿಯರ ಅರಸನಾದ ಸೀಹೋನನಿಗೆ ಮಾಡಿದಂತೆ ಇವನಿಗೂ ಸಹ ಮಾಡುವಿರಿ” ಅಂದನು.
ಅರಣ್ಯಕಾಂಡ ಅಧ್ಯಾಯ 21
35 ಇಸ್ರೇಲರು ಓಗನನ್ನೂ ಅವನ ಸೈನ್ಯವನ್ನೂ ಸೋಲಿಸಿದರು. ಅವರು ಅವನನ್ನೂ ಅವನ ಪುತ್ರರನ್ನೂ ಕೊಂದುಹಾಕಿ ಅವನ ಸೈನ್ಯವನ್ನೆಲ್ಲಾ ನಾಶಮಾಡಿದರು. ಯಾರನ್ನೂ ಜೀವಂತವಾಗಿ ಉಳಿಸಲಿಲ್ಲ. ಇಸ್ರೇಲರು ಅವನ ದೇಶವನ್ನು ವಶಪಡಿಸಿಕೊಂಡರು.