Kannada ಬೈಬಲ್

ನ್ಯಾಯಸ್ಥಾಪಕರು ಒಟ್ಟು 21 ಅಧ್ಯಾಯಗಳು

ನ್ಯಾಯಸ್ಥಾಪಕರು

ನ್ಯಾಯಸ್ಥಾಪಕರು ಅಧ್ಯಾಯ 15
ನ್ಯಾಯಸ್ಥಾಪಕರು ಅಧ್ಯಾಯ 15

ಸಂಸೋನನು ಫಿಲಿಷ್ಟಿಯರನ್ನು ಪೀಡಿಸಿದನು 1 ಗೋಧಿಯ ಸುಗ್ಗಿಕಾಲದಲ್ಲಿ ಸಂಸೋನನು ತನ್ನ ಹೆಂಡತಿಯನ್ನು ನೋಡಲು ಹೋದನು. ಅವನು ತನ್ನ ಸಂಗಡ ಒಂದು ಮರಿಹೋತವನ್ನು ತೆಗೆದುಕೊಂಡು ಹೋದನು. ಆಕೆಯ ತಂದೆಗೆ ಅವನು, “ನನ್ನ ಹೆಂಡತಿಯ ಕೋಣೆಗೆ ಹೋಗಬೇಕು” ಎಂದನು. ಆದರೆ ಆಕೆಯ ತಂದೆಯು ಸಂಸೋನನನ್ನು ಒಳಗೆ ಬಿಡಲಿಲ್ಲ.

2 ಅವನು ಸಂಸೋನನಿಗೆ, “ನೀನು ಅವಳನ್ನು ದ್ವೇಷಿಸುವೆ ಎಂದು ತಿಳಿದು ಮದುವೆಯಲ್ಲಿ ನಿನ್ನೊಂದಿಗಿದ್ದ ಉತ್ತಮ ಪುರುಷನೊಬ್ಬನಿಗೆ ಅವಳನ್ನು ಮದುವೆ ಮಾಡಿಕೊಟ್ಟೆ. ಅವಳ ತಂಗಿಯು ಆಕೆಗಿಂತ ಹೆಚ್ಚು ಸುಂದರಿಯಾಗಿದ್ದಾಳೆ. ಆಕೆಯನ್ನು ನೀನು ಮದುವೆಯಾಗು” ಎಂದನು.

ನ್ಯಾಯಸ್ಥಾಪಕರು ಅಧ್ಯಾಯ 15

3 ಸಂಸೋನನು ಅವನಿಗೆ, “ಫಿಲಿಷ್ಟಿಯರಾದ ನಿಮಗೆ ತೊಂದರೆಕೊಡಲು ನನಗೊಂದು ಒಳ್ಳೆಯ ಕಾರಣ ಸಿಕ್ಕಿತು. ಈಗ ಯಾರೂ ನನ್ನದು ತಪ್ಪೆಂದು ಹೇಳುವುದಿಲ್ಲ” ಎಂದು ಹೇಳಿದನು.

4 ಸಂಸೋನನು ಹೊರಗೆ ಹೋಗಿ ಮುನ್ನೂರು ನರಿಗಳನ್ನು ಹಿಡಿದನು. ಅವುಗಳಲ್ಲಿ ಎರಡೆರಡು ನರಿಗಳನ್ನು ಹಿಡಿದು ಒಂದರ ಬಾಲವನ್ನು ಮತ್ತೊಂದರ ಬಾಲಕ್ಕೆ ಕಟ್ಟಿದನು. ನರಿಗಳ ಪ್ರತಿಯೊಂದು ಜೋಡಿಯ ಬಾಲಗಳ ಮಧ್ಯದಲ್ಲಿ ಒಂದು ಪಂಜನ್ನು ಕಟ್ಟಿದನು.

5 ಸಂಸೋನನು ಆ ಪಂಜುಗಳಿಗೆ ಬೆಂಕಿ ಹಚ್ಚಿ ಆ ನರಿಗಳನ್ನು ಫಿಲಿಷ್ಟಿಯರ ಪೈರುಗಳಿದ್ದ ಹೊಲಗಳಲ್ಲಿ ಓಡಾಡಲು ಬಿಟ್ಟನು. ಈ ರೀತಿ ಅವನು ಅವರ ಹೊಲಗಳಲ್ಲಿ ಬೆಳೆದ ಪೈರನ್ನೂ ಮತ್ತು ಅವರು ಕೊಯ್ದುಹಾಕಿದ ತೆನೆಗೂಡುಗಳನ್ನೂ ಸುಟ್ಟುಹಾಕಿದನು. ಅವನು ಅವರ ದ್ರಾಕ್ಷಿಯ ತೋಟಗಳನ್ನು ಮತ್ತು ಆಲಿವ್ ಮರಗಳನ್ನು ಸುಟ್ಟುಹಾಕಿದನು.

ನ್ಯಾಯಸ್ಥಾಪಕರು ಅಧ್ಯಾಯ 15

6 “ಇದನ್ನು ಮಾಡಿದವರು ಯಾರು?” ಎಂದು ಫಿಲಿಷ್ಟಿಯರು ವಿಚಾರಿಸಿದರು. ಒಬ್ಬನು, “ತಿಮ್ನಾ ನಗರದವನ ಅಳಿಯನಾದ ಸಂಸೋನನು ಇದನ್ನು ಮಾಡಿದನು. ಸಂಸೋನನ ಮಾವನು ಸಂಸೋನನ ಹೆಂಡತಿಯನ್ನು ಮದುವೆಯಲ್ಲಿದ್ದ ಉತ್ತಮ ಪುರುಷನೊಬ್ಬನಿಗೆ ಮದುವೆಮಾಡಿಕೊಟ್ಟಿದ್ದಕ್ಕಾಗಿ ಅವನು ಹೀಗೆಲ್ಲಾ ಮಾಡಿದನು” ಎಂದು ಹೇಳಿದನು. ಆಗ ಫಿಲಿಷ್ಟಿಯರು ಸಂಸೋನನ ಹೆಂಡತಿಯನ್ನು ಮತ್ತು ಅವಳ ತಂದೆಯನ್ನು ಸುಟ್ಟುಹಾಕಿದರು.

7 ಸಂಸೋನನು ಫಿಲಿಷ್ಟಿಯರಿಗೆ, “ನೀವು ನನಗೆ ಈ ದುಷ್ಕೃತ್ಯವನ್ನು ಮಾಡಿರುವುದರಿಂದ ನಾನೂ ನಿಮಗೆ ಕೇಡನ್ನು ಮಾಡುತ್ತೇನೆ” ಎಂದು ಹೇಳಿ,

ನ್ಯಾಯಸ್ಥಾಪಕರು ಅಧ್ಯಾಯ 15

8 ಅವರ ಮೇಲೆ ಆಕ್ರಮಣ ಮಾಡಿ ಅವರಲ್ಲಿ ಅನೇಕರನ್ನು ಕೊಂದುಹಾಕಿದನು. ಆಮೇಲೆ ಅವನು ಹೋಗಿ ಒಂದು ಗುಹೆಯಲ್ಲಿ ಇದ್ದುಬಿಟ್ಟನು. ಆ ಗುಹೆಯು ಏಟಾಮಿನ ಬಂಡೆಯ ಬಳಿಯಲ್ಲಿತ್ತು.

9 ಆಗ ಫಿಲಿಷ್ಟಿಯರು ಯೆಹೂದಕ್ಕೆ ಹೋಗಿ, ಅವರು ಲೆಹೀ ಎಂಬ ಸ್ಥಳದ ಬಳಿ ಪಾಳೆಯಮಾಡಿಕೊಂಡರು ಮತ್ತು ಯುದ್ಧದ ಸಿದ್ಧತೆ ಮಾಡತೊಡಗಿದರು.

10 ಯೆಹೂದ್ಯರು ಅವರಿಗೆ, “ಫಿಲಿಷ್ಟಿಯರಾದ ನೀವು ನಮ್ಮ ಸಂಗಡ ಯುದ್ಧ ಮಾಡುವುದಕ್ಕೆ ಇಲ್ಲಿಗೇಕೆ ಬಂದಿದ್ದೀರಿ?” ಎಂದು ಕೇಳಿದರು. ಅದಕ್ಕೆ ಅವರು, “ನಾವು ಸಂಸೋನನನ್ನು ಹಿಡಿಯಲು ಬಂದಿದ್ದೇವೆ. ನಾವು ಅವನನ್ನು ಬಂಧಿಸಬೇಕಾಗಿದೆ. ಅವನು ನಮ್ಮ ಜನರಿಗೆ ಮಾಡಿದ ದ್ರೋಹಕ್ಕಾಗಿ ಅವನನ್ನು ಶಿಕ್ಷಿಸಬೇಕು” ಎಂದು ಉತ್ತರಕೊಟ್ಟರು.

ನ್ಯಾಯಸ್ಥಾಪಕರು ಅಧ್ಯಾಯ 15

11 ಆಗ ಯೆಹೂದಕುಲದ ಮೂರು ಸಾವಿರ ಜನರು ಸಂಸೋನನಲ್ಲಿಗೆ ಹೋದರು. ಅವರು ಏಟಾಮಿನ ಬಂಡೆಯ ಬಳಿಯಲ್ಲಿದ್ದ ಗುಹೆಗೆ ಬಂದು ಅವನಿಗೆ, “ನೀನು ನಮಗೆ ಮಾಡಿರುವುದೇನು? ಫಿಲಿಷ್ಟಿಯರು ನಮ್ಮನ್ನು ಆಳುತ್ತಿದ್ದಾರೆ ಎಂಬುದು ನಿನಗೆ ಗೊತ್ತಿಲ್ಲವೇ?” ಎಂದು ಕೇಳಿದರು. ಸಂಸೋನನು, “ಅವರು ನನಗೆ ಮಾಡಿದ ದ್ರೋಹಕ್ಕಾಗಿ ನಾನು ಅವರನ್ನು ಶಿಕ್ಷಿಸಿದೆ” ಎಂದನು.

12 ಆಗ ಅವರು ಸಂಸೋನನಿಗೆ, “ನಾವು ನಿನ್ನನ್ನು ಬಂಧಿಸಲು ಬಂದಿದ್ದೇವೆ. ನಾವು ನಿನ್ನನ್ನು ಫಿಲಿಷ್ಟಿಯರಿಗೆ ಕೊಡುತ್ತೇವೆ” ಎಂದರು. ಸಂಸೋನನು ಯೆಹೂದ್ಯರಿಗೆ, “ನೀವು ನನ್ನನ್ನು ಕೊಲ್ಲುವುದಿಲ್ಲವೆಂದು ಆಣೆಮಾಡಿರಿ” ಅಂದನು.

ನ್ಯಾಯಸ್ಥಾಪಕರು ಅಧ್ಯಾಯ 15

13 ಯೆಹೂದ್ಯರು, “ಆಗಲಿ, ನಾವು ನಿನ್ನನ್ನು ಬಂಧಿಸಿ ಫಿಲಿಷ್ಟಿಯರಿಗೆ ಕೊಡುತ್ತೇವೆ. ನಾವು ನಿನ್ನನ್ನು ಕೊಲ್ಲುವುದಿಲ್ಲವೆಂದು ಆಣೆಮಾಡುತ್ತೇವೆ” ಎಂದು ಹೇಳಿದರು. ಅವರು ಸಂಸೋನನನ್ನು ಎರಡು ಹೊಸ ಹಗ್ಗಗಳಿಂದ ಬಂಧಿಸಿ ಗುಹೆಯಿಂದ ಹೊರ ಕರೆತಂದರು.

14 ಸಂಸೋನನನ್ನು ಲೆಹೀ ಎಂಬ ಸ್ಥಳಕ್ಕೆ ತಂದಾಗ ಫಿಲಿಷ್ಟಿಯರು ಅವನನ್ನು ನೋಡುವದಕ್ಕೆ ಬಂದರು. ಅವರು ಸಂತೋಷದಿಂದ ಆರ್ಭಟಿಸುತ್ತಿದ್ದರು. ಆಗ ಯೆಹೋವನ ಆತ್ಮವು ಪ್ರಬಲವಾಗಿ ಸಂಸೋನನ ಮೇಲೆ ಬಂದಿತು. ಸಂಸೋನನು ಹಗ್ಗಗಳನ್ನು ಸುಟ್ಟದಾರಗಳೊ ಎಂಬಂತೆ ಕಿತ್ತುಹಾಕಿದನು; ಕೈಗೆ ಕಟ್ಟಿದ್ದ ಹಗ್ಗಗಳು ಕಳಚಿಬಿದ್ದವು.

ನ್ಯಾಯಸ್ಥಾಪಕರು ಅಧ್ಯಾಯ 15

15 ಸಂಸೋನನು ಸತ್ತಕತ್ತೆಯ ದವಡೇ ಎಲುಬನ್ನು ಕಂಡನು. ಅವನು ಆ ದವಡೇ ಎಲುಬನ್ನು ತೆಗೆದುಕೊಂಡು ಅದರಿಂದ ಒಂದು ಸಾವಿರ ಫಿಲಿಷ್ಟಿಯರನ್ನು ಕೊಂದುಹಾಕಿದನು.

16 ಆಗ ಸಂಸೋನನು, “ಕತ್ತೆಯ ದವಡೇ ಎಲುಬಿನಿಂದ ನಾನು ಒಂದು ಸಾವಿರ ಜನರನ್ನು ಕೊಂದೆನು,
ಕತ್ತೆಯ ದವಡೇ ಎಲುಬಿನಿಂದ ನಾನು ಹೆಣಗಳನ್ನು ರಾಶಿರಾಶಿಯಾಗಿ ಬೀಳಿಸಿದೆನು” ಅಂದನು.

17 ಬಳಿಕ ಸಂಸೋನನು ದವಡೇ ಎಲುಬನ್ನು ಬಿಸಾಡಿದನು. ಆದ್ದರಿಂದ ಆ ಸ್ಥಳಕ್ಕೆ ರಾಮತ್ ಲೆಹೀ ಎಂದು ಹೆಸರಾಯಿತು.

ನ್ಯಾಯಸ್ಥಾಪಕರು ಅಧ್ಯಾಯ 15

18 ಸಂಸೋನನಿಗೆ ತುಂಬ ನೀರಡಿಕೆಯಾಗಿತ್ತು. ಅವನು ಯೆಹೋವನಿಗೆ, “ನಾನು ನಿನ್ನ ಸೇವಕನಾಗಿದ್ದೇನೆ. ನೀನು ನನಗೆ ಈ ಮಹಾವಿಜಯವನ್ನು ಕೊಟ್ಟಿರುವೆ. ದಯವಿಟ್ಟು ಈಗ ನಾನು ನೀರಡಿಕೆಯಿಂದ ಸಾಯಲು ಬಿಡಬೇಡ. ಸುನ್ನತಿ ಮಾಡಿಸಿಕೊಂಡಿಲ್ಲದವರು ನನ್ನನ್ನು ಹಿಡಿದುಕೊಡುವಂತೆ ಮಾಡಬೇಡ” ಎಂದು ಪ್ರಾರ್ಥಿಸಿದನು.

19 ಲೆಹೀಯ ನೆಲದಲ್ಲಿ ಒಂದು ಸುರಂಗವಿದೆ. ದೇವರು ಆ ಸುರಂಗವನ್ನು ಸೀಳಿ ಅದರೊಳಗಿಂದ ನೀರು ಬರುವಂತೆ ಮಾಡಿದನು. ಸಂಸೋನನು ನೀರು ಕುಡಿದು ಪುನಃ ಚೈತನ್ಯ ಪಡೆದನು. ಆದ್ದರಿಂದ ಅವನು ಆ ನೀರಿನ ಬುಗ್ಗೆಗೆ ಏನ್ ಹಕ್ಕೋರೇ ಎಂದು ಕರೆದನು. ಅದು ಇಂದಿಗೂ ಲೆಹೀ ನಗರದಲ್ಲಿ ಇದೆ.

ನ್ಯಾಯಸ್ಥಾಪಕರು ಅಧ್ಯಾಯ 15

20 ಸಂಸೋನನು ಇಪ್ಪತ್ತು ವರ್ಷ ಇಸ್ರೇಲರ ನ್ಯಾಯಾಧೀಶನಾಗಿದ್ದನು. ಅದು ಫಿಲಿಷ್ಟಿಯರ ಕಾಲವಾಗಿತ್ತು.